User login

2010 ನೆ ಮಾರ್ಚ್ 20 ಮತ್ತು 21 ರಂದು ಬೆಂಗಳೂರಿನಲ್ಲಿ ಜರುಗುವ ರಾಷ್ಟ್ರ ಮಟ್ಟದ

2010 ನೆ ಮಾರ್ಚ್ 20 ಮತ್ತು 21 ರಂದು ಬೆಂಗಳೂರಿನಲ್ಲಿ ಜರುಗುವ ರಾಷ್ಟ್ರ ಮಟ್ಟದ

ಸ್ವತಂತ್ರ ತಂತ್ರಾಂಶ ಸಮ್ಮೇಳನ ಕ್ಕೆ ಆಹ್ವಾನ

ಅಗಾಧ ಹಣ ವಸೂಲಿ ಮಾಡುವ ಲಾಭಕೋರ ಬಹು ರಾಷ್ಟ್ರೀಯ ಕಂಪನಿಗಳ ಹಿಡಿತದಿಂದ ಸಾಫ್ಟ್ ವೇರ್ ತಂತ್ರಜ್ಞಾನಗಳನ್ನು ಸ್ವತಂತ್ರಗೊಳಿಸಿ ಸಾಫ್ಟ್ ವೇರ್ ಬಳಕೆದಾರರಿಗೆ ಮತ್ತು ತಂತ್ರಜ್ಞರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದಕ್ಕೆ ವಿಶ್ವದಾದ್ಯಂತ ಶ್ರಮಿಸುತ್ತಿರುವ, ಜನಸಮುದಾಯಗಳ ನೇತೃತ್ವದ ಜಾಗತಿಕ ಚಳುವಳಿಯ ಭಾಗವಾಗಿ ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ ಸಂಸ್ಥೆಯು ಶ್ರಮಿಸುತ್ತಿದೆ. ಭಾರತದಂಥಹ ದೇಶದಲ್ಲಿ ಕೇವಲ ಶೇ. 5 ಕ್ಕಿಂತಲೂ ಕಡಿಮೆ ಜನ ಮಾತ್ರ ಇಂಗ್ಲಿಷ್ ಬಲ್ಲವರು. ಈ ಕಂಪನಿಗಳು ತಯಾರಿಸುವ ಸಾಫ್ಟ್ ವೇರ್ ಉತ್ಪನ್ನಗಳು ಕೇವಲ ಇಂಗ್ಲಿಷ್ ಬಲ್ಲವರು ಮಾತ್ರವೇ ಉಪಯೋಗಿಸಬಲ್ಲಂತವು. ಹೀಗಾಗಿ ಕನ್ನಡದಂಥಹ ಪ್ರಾದೇಶಿಕ ಭಾಷೆಯಲ್ಲಿ ಕನ್ನಡದ ಜನತೆಗೆ ಅವಶ್ಯವಿರುವ ಸಾಫ್ಟ್ ವೇರ್ ನ್ನು ಸಮುದಾಯವೇ ಉತ್ಪಾದಿಸಬೇಕೆ ಹೊರತು, ಲಾಭಕೋರ ಕಂಪನಿಗಳನ್ನು ಅವಲಂಬಿಸಲಾಗದು. ಮಾರುಕಟ್ಟೆಯಲ್ಲಿ ಲಾಭ ಮಾಡಲು ಅವಕಾಶವಿರುವ ಉತ್ಪನ್ನಗಳನ್ನು ಮಾತ್ರವೇ ಅವು ತಯಾರಿಸುವುದು. ಅಲ್ಲದೆ, ಈ ಕಂಪನಿಗಳು ಸಾಫ್ಟ್ ವೇರ್ ಜೊತೆ ಅವುಗಳ ಮೂಲ ಸಂಕೇತಗಳನ್ನು ನೀಡುವುದಿಲ್ಲವಾದ್ದರಿಂದ ಕನ್ನಡದ ಜನತೆಗೆ ಅವಶ್ಯವಿರುವ ಕನ್ನಡೀಕರಣದ ಸಾಫ್ಟ್ ವೇರ್ ತಯಾರಿಸಲು ಅಥವಾ ಮಾರ್ಪಡಿಸಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಿಸಿವೆ.

ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ ಸಂಸ್ಥೆಯು ಒಂದು ವೈಜ್ಞಾನಿಕ, ಜನಪರ ಸಂಸ್ಥೆಯಾಗಿದ್ದು ಸ್ವತಂತ್ರ ತಂತ್ರಾಂಶ (Free Software) ಕುರಿತಾದ ತಂತ್ರಜ್ಞಾನ ಮಾಹಿತಿಗಳನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು , ಶಿಕ್ಷಕರು, ತಂತ್ರಜ್ಞರು, ಶಿಕ್ಷಣ ಸಂಸ್ಥೆಗಳು, ಬರಹಗಾರರು, ಬುದ್ದಿಜೀವಿಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಪಸರಿಸುವ ಕಾಯಕದಲ್ಲಿ ತೊಡಗಿದೆ.

ಇದೀಗ ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ ಸಂಸ್ಥೆಯು ರಾಷ್ಟ್ರ ಮಟ್ಟದ ಸ್ವತಂತ್ರ ತಂತ್ರಾಂಶ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಿದೆ. 2010 ನೆ ಮಾರ್ಚ್ 20 ಮತ್ತು 21 ರಂದು 2 ದಿನಗಳ ಕಾಲ ಜರುಗುವ ಈ ಸಮ್ಮೇಳನದಲ್ಲಿ ರಾಷ್ಟ್ರ ವಿವಿಧ ರಾಜ್ಯಗಳಿಂದ 1,000 ಕ್ಕೂ ಹೆಚ್ಚು ತಂತ್ರಜ್ಞರು, ಬರಹಗಾರರು, ಬುದ್ದಿಜೀವಿಗಳು ಮತ್ತು ಸಂಶೋಧಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. ಐ.ಟಿ. ರಾಜಧಾನಿಯಲ್ಲಿ ಜರುಗುತ್ತಿರುವ ರಾಷ್ಟ್ರ ಮಟ್ಟದ ಈ ಸಮ್ಮೇಳನಕ್ಕೆ ಭಾರತೀಯ ವಿಜ್ಞಾನ ಮಂದಿರ (Indian Institute of Science), ಭಾರತೀಯ ನಿರ್ವಹಣ ಸಂಸ್ಥೆ (Indian Institute of Management), ಭಾರತಿಯ ಖಗೋಳ ಭೌತವಿಜ್ಞಾನ ಸಂಸ್ಥೆ (Indian Institute of Astrophysics)ಯ ಖ್ಯಾತ ಪ್ರೊಫೆಸರ್ ಗಳು, ವಿಜ್ಞಾನಿಗಳು ಭಾರತೀಯ ಜ್ಞಾನ ವಿಜ್ಞಾನ ಸಮಿತಿ, ರಾಜ್ಯದ ವಿಶ್ವವಿದ್ಯಾಲಯಗಳು , ಇತ್ಯಾದಿಯಂಥಹ ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಗಳು, ನಾಡಿನ ಸಾರಸ್ವತ ಲೋಕದ ದಿಗ್ಗಜರು ಬೆಂಬಲ ಮತ್ತು ಸಹಾಯ ನೀಡಲು ಮುಂದೆ ಬಂದಿದ್ದಾರೆ.

ರಾಷ್ಟ್ರ ಮಟ್ಟದ ಸ್ವತಂತ್ರ ತಂತ್ರಾಂಶ ಸಮ್ಮೇಳನಕ್ಕೆ ತಮ್ಮನ್ನು ಆಹ್ವಾನಿಸಲು ನಮಗೆ ಹೆಮ್ಮೆ ಎನಿಸುತ್ತದೆ. ತಾವು ಈ ಸಮ್ಮೇಳನಕ್ಕೆ ಹಾಜರಾಗಿ ಈ ಸಮ್ಮೇಳನವನ್ನು ಯಶಸ್ಸುಗೊಳಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ.

ಹೃತ್ಪೂರ್ವಕ ಧನ್ಯವಾದಗಳೊಂದಿಗೆ,

ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ ಪರವಾಗಿ